ಇಂದ್ರಾಯುಧ 

ಇಂದ್ರನ ವಜ್ರಾಯುಧ. ಇದನ್ನು ಬಳಸಿರುವ ಕೆಲವು ನಿದರ್ಶನಗಳು ಇಲ್ಲಿವೆ. ಬೃಹಸ್ಪತಿಯ ತಮ್ಮನಾದ ಸಂವರ್ತನನ್ನು ಮರುತ್ತ ಕರೆದು ಯಜ್ಞ ಮಾಡುತ್ತಿದ್ದಾಗ ಆ ಯಜ್ಞಕ್ಕೆ ವಿಘ್ನ ಒಡ್ಡಲು ಇಂದ್ರ ವಜ್ರಾಯುಧದಿಂದ ಸಂವರ್ತನನ್ನು ಸಂವರ್ಧಿಸಲು ಹೋದಾಗ ಸಂವರ್ತನ ಮಂತ್ರಬಲದಿಂದ ಇಂದ್ರನ ತೋಳು ಸ್ತಂಭನಗೊಂಡಿತು. ಚ್ಯವನಮಹರ್ಷಿ ಅಶ್ವಿನೀ ದೇವತೆಗಳಿಗೆ ಹವಿರ್ಭಾಗವನ್ನು ಕೊಡಿಸಿದನೆಂದು ರೋಷದಿಂದ ಇಂದ್ರ ಚ್ಯವನನನ್ನು ಇಂದ್ರಾಯುಧದಿಂದ ಕೊಲ್ಲಲು ಹೋಗಿ ವಿಫಲನಾದ. ಒಮ್ಮೆ ದಿತಿ ಇಂದ್ರನನ್ನು ಕೊಲ್ಲತಕ್ಕ ಪರಾಕ್ರಮಿಯನ್ನು ಕಶ್ಯಪನಿಂದ ಪಡೆಯಲು ತಪೋದ್ಯುಕ್ತಳಾದಳು. ಇದನ್ನು ಅರಿತ ಇಂದ್ರ ಮೋಸದಿಂದ ಅವಳ ಸೇವೆಗೈಯ್ಯುವವನಂತೆ ನಟಿಸಿ ಹಗಲು ಹೊತ್ತಿನಲ್ಲಿ ಒಮ್ಮೆ ದಿತಿ ಶಾಸ್ತ್ರವಿರುದ್ಧವಾಗಿ ಕಾಲುಚಾಚಿಕೊಂಡು ಮಲಗಿದ್ದಾಗ ತನ್ನ ವಜ್ರಾಯುಧದಿಂದ ಅವಳ ಗರ್ಭದ ಪಿಂಡವನ್ನು ಏಳು ಸೀಳಾಗಿ ಮಾಡಿದ. ಸೀಳಾದ ಪಿಂಡಗಳು ರೋಧಿಸುತ್ತಿರುವುದನ್ನು ಕಂಡು ವಜ್ರಾಯುಧದಿಂದ ಮತ್ತೆ ಒಂದೊಂದು ಪಿಂಡವನ್ನೂ ಏಳೇಳು ಭಾಗ ಮಾಡಿದ. ಎಚ್ಚೆತ್ತ ದಿತಿ ಇದನ್ನು ತಿಳಿದು ತನ್ನ ಮಕ್ಕಳನ್ನು ಕಾಪಾಡಬೇಕೆಂದು ಇಂದ್ರನನ್ನೇ ಮೊರೆಹೊಕ್ಕಳು. ಅವೇ 49 ಪ್ರಬೇಧಗಳುಳ್ಳ ಮರುತ್ತು(ವಾಯು)ಗಳೆಂದು ಪ್ರಸಿದ್ಧವಾಗಿವೆ. 
(ನೋಡಿ- ಇಂದ್ರ)

2. ಬಾಣಕೃತ ಕಾದಂಬರೀ ಮಾಹಾಕಾವ್ಯದಲ್ಲಿ ತಾರಾಪೀಡ ತನ್ನ ಮಗನಾದ ಚಂದ್ರಾಪೀಡನಿಗೆ ಬಳುವಳಿಯಾಗಿ ಕೊಟ್ಟ ಒಂದು ದಿವ್ಯಾಶ್ವದ ಹೆಸರು. ಪುಂಡರೀಕನ ಗೆಳೆಯನಾದ ಕಪಿಂಜಲನೇ ಅಶ್ವರೂಪಿಯಾಗಿ ಬಂದು ಸ್ನೇಹಿತನ ಉದ್ಧಾರಕಾರ್ಯದಲ್ಲಿ ಸಹಾಯ ಮಾಡಿದನೆಂದು ಕಥೆ. 										

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ